ಶ್ಯಾಮಚರಣ ಲಾಹಿರಿ (30 ಸೆಪ್ಟೆಂಬರ್ 1828 - 26 ಸೆಪ್ಟೆಂಬರ್ 1895) ಇವರು ಲಾಹಿರಿ ಮಹಾಶಯ ಎಂದೇ ಪ್ರಖ್ಯಾತರು. ಇವರು ಓರ್ವ ಯೋಗಿ ಹಾಗು ಮಹಾವತಾರ ಬಾಬಾಜಿ ಅವರ ಶಿಷ್ಯರು. ಇವರು ಯೋಗಿರಾಜ ಮತ್ತು ಕಾಶಿಬಾಬಾ ಎಂದೇ ಪ್ರಖ್ಯಾತರು. ಇವರು ಪರಮಹಂಸ ಯೋಗಾನಂದರ ಗುರುಗಳಾದ ಸ್ವಾಮಿ ಯುಕ್ತೇಶ್ವರ ಗಿರಿಯವರ ಗುರುಗಳು. ಲಾಹಿರಿ ಮಹಾಶಯರು ಬ್ರಿಟೀಶ್ ಆಡಳಿತ ಭಾರತದ ಸೇನೆಯ ಲೆಕ್ಕ ಪತ್ರಪರಿಶೋದಕರಾಗಿದ್ದರು. 1861ರಲ್ಲಿ ಕ್ರಿಯಾಯೋಗವನ್ನು ತಮ್ಮ ಗುರುಗಳಿಂದ ಪಡೆದ ನಂತರ ಲಾಹಿರಿ ಮಹಾಶಯ ಎಂದು ತಮ್ಮ ಶಿಷ್ಯರಿಂದ ಕರೆಯಲ್ಪಟ್ಟವರು. ಇವರು ತಮ್ಮ ಸಂಸಾರದೊಂದಿಗೆ ವಾರಣಾಸಿಯಲ್ಲಿ ಜೀವನವನ್ನು ಕೊನೆಯವರೆಗೆ ಸಾಗಿಸಿದ್ದರು. ಇವರು ತಮ್ಮ ಶಿಷ್ಯರಾದ ಸ್ವಾಮಿ ಯುಕ್ತೇಶ್ವರ ಗಿರಿಯ ಶಿಷ್ಯರಾದ ಪರಮಹಂಸ ಯೋಗಾನಂದರ 'ಯೋಗಿಯ ಆತ್ಮಕಥೆ' ಎಂಬ ಕೃತಿಯ ಮೂಲಕ ಜಗದ್ವಿಖ್ಯಾತಿ ಪಡೆದರು. ಯೋಗಾನಂದರ ಪ್ರಕಾರ ಮಹಾವತಾರ ಬಾಬಾಜಿಯವರು ಕ್ರಿಯಾಯೋಗದ ಪುನರುತ್ಥಾನಕ್ಕಾಗಿ ಲಾಹಿರಿ ಮಹಾಶಯರನ್ನು ಆರಿಸಿದ್ದರು. ಯೋಗಾನಂದರ ಗುರುಗಳು, ತಂದೆ-ತಾಯಿ ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು. ಲಾಹಿರಿ ಮಹಾಶಯರು ಯೋಗಾನಂದರು ಸಣ್ಣ ಬಾಲಕನಾಗಿದ್ದಾಗ ಅವರ ತಾಯಿಯ ಬಳಿ "ಈತ ಆಧ್ಯಾತ್ಮ ಇಂಜಿನ್ ಆಗುತ್ತಾನೆ,ದೇವರ ಸಾಮ್ರಾಜ್ಯಕ್ಕೆ ಅನೇಕ ಆತ್ಮಗಳನ್ನು ಕೊಂಡೊಯ್ಯುತ್ತಾನೆ" ಎಂದು ಭವಿಷ್ಯ ನುಡಿದಿದ್ದರು. == ಬಾಲ್ಯ == ಲಾಹಿರಿ ಮಹಾಶಯರು ಬಂಗಾಳ ಪ್ರಾಂತ್ಯದ ಗುರ್ಣಿ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಇವರು ಮುಕ್ತಕಾಶಿ ಮತ್ತು ಗೌರಮೋಹನ ಲಾಹಿರಿ ದಂಪತಿಗಳ ಕೊನೆಯ ಮಗ. ಇವರ ತಾಯಿ ಮಹಾನ್ ಶಿವಭಕ್ತೆಯಾಗಿದ್ದರು. ಲಾಹಿರಿಯವರು ಮೂರು ವರ್ಷದ ಬಾಲಕನಾಗಿದ್ದಾಗಲೆ ತಮ್ಮ ತಾಯಿಯನ್ನು ಕಳೆದುಕೊಂಡರು. ಎಳೆಯ ಪ್ರಾಯದಿಂದಲೇ ಇವರು ಧ್ಯಾನಸ್ಥರಾಗಿ ಮರಳಲ್ಲಿ ಕುತ್ತಿಗೆ ತನಕ ಮುಚ್ಚಿರುತ್ತಿದ್ದರಂತೆ. ನೆರೆಯಲ್ಲಿ ತಮ್ಮ ಮನೆಯನ್ನು ಕಳೆದುಕೊಂಡ ಮೇಲೆ ಇವರ ಸಂಸಾರ ವಾರಣಾಸಿಗೆ ತೆರಳಿತಂತೆ. ಅಲ್ಲಿಯೇ ಲಾಹಿರಿ ಮಹಾಶಯರು ತಮ್ಮ ಜೀವನದ ಬಹುತೇಕ ವರ್ಷಗಳನ್ನು ಕಳೆದರು.ಬಾಲ್ಯದಿಂದಲೇ ಉರ್ದು, ಹಿಂದಿ,ಬಂಗಾಲಿ,ಸಂಸೃತ,ಪರ್ಶಿಯನ್,ಫ್ರೆಂಚ್ ಹಾಗು ಇಂಗ್ಲೀಷ್ ಭಾಷೆಗಳನ್ನು ಕಲಿತರು. == ಗೃಹಸ್ಥ ಜೀವನ == 1846ರಲ್ಲಿ ಕಾಶಿಮಣಿಯವರೊಂದಿಗೆ ಲಾಹಿರಿ ಮಹಾಶಯರ ವಿವಾಹ ನೆರವೇರಿತು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಹುಟ್ಟಿದರು. ಇವರ ಇಬ್ಬರು ಮಕ್ಕಳು ತಂದೆಯಂತೆ ಆಧ್ಯಾತ್ಮ ಹಾದಿಯನ್ನು ತುಳಿದರು. ಇವರ ಮಡದಿ ಅವರ ಶಿಷ್ಯೆಯಾಗಿ ನಂತರ ಲಾಹಿರಿ ಮಹಾಶಯರ ಶಿಷ್ಯರಿಂದ 'ಗುರು ಮಾ'ಎಂದು ಕರೆಯಲ್ಪಟ್ಟರು. == ಕ್ರಿಯಾಯೋಗ ಗುರುವಾಗಿ ಲಾಹಿರಿ ಮಹಾಶಯ == 1861ರಲ್ಲಿ ಲಾಹಿರಿಯವರು ವರ್ಗಾವಣೆಗೊಂಡು ಹಿಮಾಲಯದ ತಪ್ಪಲಿನ ರಾಣಿಖೇತ್‍ಗೆ ತೆರಳಿದರು. ಕೆಲಸದ ಬಿಡುವಿನ ವೇಳೆ ಪರ್ವತ ಮಾರ್ಗವಾಗಿ ಅಲೆದಾಡುತ್ತಿರಬೇಕಾದರೆ ತಮ್ಮ ಹೆಸರನ್ನು ಯಾರೋ ಕರೆದಂತಾಯಿತು.ನಂತರ ಮೇಲೇರಿ ಹೋದಾಗ ಯೋಗಿ ಮಹಾವತಾರ ಬಾಬಾಜಿಯವರನ್ನು ಭೇಟಿಯಾದರು. ಆ ಬಳಿಕ ಅವರಿಗೆ ಕ್ರಿಯಾಯೋಗ ದೀಕ್ಷೆಯನ್ನು ನೀಡಿದರು. ಆ ಬಳಿಕ ಲಾಹಿರಿ ಮಹಾಶಯರು ವಾರಣಾಸಿಗೆ ತೆರಳಿದರು. ಅಲ್ಲಿ ಯೋಗ ಗುರುವಾಗಿ ಸತ್ಯಾನ್ವೇಶಕರಿಗೆ ಕ್ರಿಯಾಯೋಗ ದೀಕ್ಷೆಯನ್ನು ಕೊಡತೊಡಗಿದರು. ಕ್ರಿಯಾಯೋಗ ದೀಕ್ಷೆಯನ್ನು ಮುಕ್ತವಾಗಿ ಎಲ್ಲಾ ಮತದವರಿಗೆ ಕೊಡತೊಡಗಿದರು. ಕೆಲವು ಉಲ್ಲೇಖಗಳ ಪ್ರಕಾರ ಶಿರಡಿ ಸಾಯಿಬಾಬಾ ಕೂಡ ಇವರ ಶಿಷ್ಯರು. == ಗುರು ಶಿಷ್ಯ ಪರಂಪರೆ ಕುರಿತಂತೆ == ಲಾಹಿರಿ ಮಹಾಶಯರು ಯಾವತ್ತೂ ತಮ್ಮ ಶಿಷ್ಯರಿಗೆ ಗುರುವಿಗೆ ಸದಾ ಶರಣಾಗತರಾಗಿರುವಂತೆ ತಿಳಿಸುತ್ತಿದ್ದರು. ಗುರುವಿಗೆ ಹೆಚ್ಚು ಶರಣಾಗತನಾಗುತ್ತಾ ಹೋದಂತೆ ಯೋಗದ ಸೂಕ್ಷ್ಮಾತಿ ಸೂಕ್ಷ್ಮ ಆಯಾಮಗಳನ್ನು ಗುರುವಿನ ಕೃಪೆಯಿಂದ ಕಲಿಯಬಹುದು ಎಂದು ಹೇಳುತ್ತಿದ್ದರು == ಉತ್ತರಾಧಿಕಾರಿ == 1939ರಲ್ಲಿ ಜನಿಸಿದ ಶಿಬೇಂದು ಲಾಹಿರಿಯವರು ಲಾಹಿರಿ ಮಹಾಶಯರ ಪ್ರಪೌತ್ರ. ಇವರು ಜಗತ್ತಿನಾದ್ಯಂತ ಕ್ರಿಯಾಯೋಗವನ್ನು ಕಲಿಸುತ್ತಾರೆ. ಇವರು ತಮ್ಮ ತಂದೆಯಿಂದ ದೀಕ್ಷೆ ಪಡೆದರು. == ಉಲ್ಲೇಖಗಳು ==